ಹಿಮಾಚಲ ಪ್ರದೇಶದಲ್ಲಿ ಹಿಮಪಾತ – ಓರ್ವ ಯೋಧ ಹುತಾತ್ಮ, 5 ಮಂದಿ ಕಣ್ಮರೆ
ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಹಿಮಪಾತದಡಿ ಸಿಲುಕಿ ಯೋಧರೊಬ್ಬರು ಮೃತಪಟ್ಟಿದ್ದು, ಐವರು ಕಣ್ಮರೆಯಾಗಿದ್ದಾರೆ,ಈಗಾಗಲೇ ಹಿಮಪಾತದಡಿ ಸಿಲುಕಿದ ಹುತಾತ್ಮ ಯೋಧನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನುಳಿದ ಐವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರ ರಕ್ಷಣೆಗೆ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಕಿನ್ನೌರ್ ಉಪ ಆಯುಕ್ತರು ಗೋಪಾಲ್ ಚಂದ್ ತಿಳಿಸಿದ್ದಾರೆ.ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇಂಡೋ-ಚೀನಾ ಗಡಿಭಾಗದ ಶಿಪ್ಕಿ ಲಾ ವಲಯದಲ್ಲಿ ಹಿಮಕುಸಿತ ಉಂಟಾಗಿದ್ದು, ಈ ವೇಳೆ ಹಲವು ಯೋಧರು ಅದರೊಳಗೆ ಸಿಲುಕಿದ್ದಾರೆ. ಕೂಡಲೇ ಕೆಲವರನ್ನು ರಕ್ಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸೇನಾ ಮೂಲಗಳ ಪ್ರಕಾರ, ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಮತ್ತು ಸೇನೆಯ ಎರಡು ತಂಡಗಳು ಶಿಪ್ಕಿ ಲಾ ವಲಯದಲ್ಲಿ ಗಸ್ತು ತಿರುಗುತ್ತಿದ್ದರು. 16 ಮಂದಿ ಯೋಧರು ಗುಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಹಿಮಪಾತವಾಗಿದೆ. ಈಗ 150 ಕ್ಕೂ ಹೆಚ್ಚು ಮಂದಿ ಯೋಧರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.