Print this page

ಬಿಎಸ್‍ವೈ ಎ1 ಆರೋಪಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂಗೌಡ ಮತ್ತು ಮರಂಕಲ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ರಾಯಚೂರು:ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಇಂದು ಮಧ್ಯಾಹ್ನ ರಾಯಚೂರು ಎಸ್‍ಪಿ ಅವರಿಗೆ ದೂರು ನೀಡಿ ಬಳಿಕ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಎ-1 ಆರೋಪಿಯಾಗಿದ್ದು, ನಂತರದಲ್ಲಿ ಶಿವನಗೌಡ ನಾಯಕ್, ಪ್ರೀತಂಗೌಡ, ಪತ್ರಕರ್ತ ಮರಂಕಲ್ ಕ್ರಮವಾಗಿ ಆರೋಪಿಗಳಾಗಿದ್ದಾರೆ.ಭ್ರಷ್ಟಾಚಾರ ನಿಗ್ರಹ ಕಾಯ್ದೆ 19/2019 ಕಲಂ 8 ಮತ್ತು 12. ಭ್ರಷ್ಟಾಚಾರ ತಡೆಗಟ್ಟುವ ತಿದ್ದುಪಡಿ ಅಧಿನಿಯಮ 2018 ಮತ್ತು 120(ಬಿ), ಐಪಿಸಿ 506 ಕಾಯ್ದೆ ಅಡಿ ಎಫ್‍ಐಆರ್ ದಾಖಲಾಗಿದೆ. ಆಡಿಯೋ ಸಿಡಿ ದಾಖಲೆಯೊಂದಿಗೆ ಶರಣಗೌಡ ಪ್ರಕರಣ ದಾಖಲಿಸಿದ್ದಾರೆ. ಶಿವನಗೌಡ ನಾಯಕ್ ಅವರು ಫೆ.07 ರಂದು ಮೊಬೈಲ್ ಕರೆಮಾಡಿ ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಯಿಸಿ ಯಡಿಯೂರಪ್ಪರನ್ನ ಭೇಟಿ ಮಾಡಿಸಿದ್ದರು. ತಮ್ಮ ತಂದೆಗೆ ರಾಜೀನಾಮೆ ಕೊಡಲು ಒಪ್ಪಿಸು ಎಂದು 10 ಕೋಟಿ ರೂ. ಮುಂಗಡ ಹಣದ ಆಮಿಷದೊಂದಿಗೆ ಒತ್ತಾಯಿಸಿದ್ದರು ಎಂದು ಆಡಿಯೋ ತುಣುಕಿನಲ್ಲಿದ್ದ ಸಂಭಾಷಣೆಯನ್ನ ದೂರಿನಲ್ಲಿ ಶರಣಗೌಡ ವಿವರಿಸಿದ್ದಾರೆ. ಅಲ್ಲದೇ ಈ ದುಷ್ಕೃತ್ಯ ಮಾಡುವುದಿಲ್ಲ ಎಂದಾಗ ನಮ್ಮ ತಂದೆಯ ರಾಜಕೀಯ ಜೀವನ ಮುಗಿಸಿಬಿಡುತ್ತೇವೆ ಎಂದು ಹೆದರಿಸಿದರು. ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣವನ್ನ ದಾಖಲು ಮಾಡಲಾಗಿದೆ ಎಂದು ಶರಣಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share this article

About Author

Madhu